Sunday, November 22, 2020

ತಾತ

ತಾತ: ಅವು ೭೦ರ ದಶಕದ ಮುದಗಲ್ ನ ತಾತನ ಮನೆಯಲ್ಲಿ ಕಳೆದ ಪ್ರಾಥಮಿಕ ಶಾಲೆಯ ದಿನಗಳು. ನಮಗೆಲ್ಲ ಶಾಲೆಯ ಹೋಗುವ ಮೊದಲು ತಿಂಡಿ ಅಂತಾ ಏನು ಕೊಡ್ತಿರಲಿಲ್ಲ. ಹಿಂದಿನ ರಾತ್ರಿಯ ಊಟಕ್ಕೆ ಅನ್ನವನ್ನು ಸ್ವಲ್ಪ ಹೆಚ್ಚಿಗೆ ಮಾಡಿರುತ್ತಿದ್ದರು. ಮರುದಿನ ಅದಕ್ಕೆ ಸ್ವಲ್ಪ ಒಗ್ಗರಣೆ ಹಾಕಿ ಮೇಲೆ ಮೆಂತ್ಯದ ಹಿಟ್ಟು ಉದರಿಸಿರುತ್ತಿದ್ದರು. ಹಿರಿಯಣ್ಣನಾದ ನಾನು, ಅನ್ನವನ್ನು ಕ್ರಮಬದ್ದವಾಗಿ ಉಪ್ಪಿನೊಂದಿಗೆ ಕಲೆಸಿ ಇಬ್ಬರು ತಮ್ಮಂದಿರು ಸೇರಿಕೊಂಡು ಮೂರು ಭಾಗ ಮಾಡುತ್ತಿದ್ದೆ. ಮೂರು ಭಾಗ ಮಾಡುವಾಗ ಅಮಾಯಕ ತಮ್ಮಂದಿರ ಭಾಗದಲ್ಲಿ ರವಷ್ಟನ್ನು ನನ್ನ ಭಾಗಕ್ಕೆ ಎಳೆದುಕೊಂಡು ಬಿಡುತ್ತಿದ್ದೆ. ಅವೆರಡು, ಕಣ್ಣನ್ನು ಪಿಳಿ ಪಿಳಿ ಬಿಟ್ಟಿಕೊಂಡು ಪಾಲಿಗೆ ಬಂದದ್ದು ಪಂಚಾ‌ಮೃತ ಅಂತಾ ಉದರಕ್ಕೆ ಸೇರಿಸುತ್ತಿದ್ದರು. ಮೂಲತಃ ವೈದಿಕ ವೃತ್ತಿಯ ನಮ್ಮ ತಾತ ಭೀಮ ಭಟ್ ಜೋಶಿಗೆ ಹೇಳಿಕೊಳ್ಳುವ ಆದಾಯವಿರಲ್ಲಿಲ್ಲ. ವೈದಿಕ ಮತ್ತು ಜೋತಿಷ್ಯದ ಆದಾಯವೇ ಬದುಕು ಸವೆಸಲು ಮೂಲ ಸೆಲೆ. ಜೊತೆಗೆ ಮೂರು ವರ್ಷ ನಾವು ಬೇರೆ ದಾಂಗುಡಿ ಹಾಕಿದ್ದೆವು. ಆದರೂ, ನಮ್ಮ ತಾತನ ಹಣಕಾಸು ನಿರ್ವಹಣೆ ಅದ್ಭುತವಾಗಿತ್ತು. ವಿನಾಃ ಕಾರಣ ಯಾವುದೇ ಖರ್ಚಿಗೆ ಮುಂದಾಗದೆ ತಾತ ಬಂದ ಆದಾಯವನ್ನು ಕೂಡಿಡುತ್ತಿದ್ದರು. ರಜಾದಿನಗಳಲ್ಲಿ, ಮಂಡಾಳನ್ನು ಹುರಿದು ಚುರುಮುರಿ ಮಾಡಿ ಕೊಡುತ್ತಿದ್ದರು. ಅದರೊಳಗಿನ ಶೆಂಗಾ, ಪುಟಾಣಿಗಳನ್ನು ಹುಡುಕಿ ಹುಡುಕಿ ತಿನ್ನುವ ಮಜಾ ಏನು ಹೇಳಲಿ. ಮನೆಯಲ್ಲಿ ಹಿರಿಯರ ಶ್ರಾದ್ಧದ ದಿನಗಳಂದು, ಎಲ್ಲಾ ವಿಧಿಗಳು ಮುಗಿದು ಆಚಾರ್ಯರ ಭೋಜನ ನಂತವೇ ನಮ್ಮ ಸರದಿ. ಆದಾಗ್ಯೂ ತಾತ,ಆಚಾರ್ಯ ರಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ಗೋವಿಂದ ಎಂದು ಹೇಳಿ ಅವರು ಮೊದಲ ತುತ್ತು ಬಾಯಿಗೆ ಇಟ್ಟ ನಂತರ ನಮಗೆಲ್ಲ ಮಧ್ಯಂತರ ಪರಿಹಾರವಾಗಿ ಒಂದೊಂದು ರವಾ ಉಂಡಿಯನ್ನು ಕೊಟ್ಟಿರುತ್ತಿದ್ದರು. ಮೊದಲೆ ಹಸಿವಿನಿಂದ ಕಂಗೆಟ್ಟಿದ್ದ ನಾವುಗಳು ಕೈಗೆ ಬಂದ ಭಕ್ಷವನ್ನು ಕುಣಿದಾಡುತ್ತಾ ತಿನ್ನುತ್ತಿದ್ದೇವು. ತಾತ ಅವರು ಆಹ್ನಿಕ ಕಾರ್ಯ ಗಳಿಗೆ ಹೋದಾಗ ನಾವು ಹಿಂಬಾಲಿಸುತ್ತಿದ್ದೇವು. ಶ್ರೀ ಸತ್ಯನಾರಾಯಣ ಪೂಜೆ, ಶ್ರಾದ್ಧ ಇತ್ಯಾದಿಗಳಲ್ಲಿ ನಮಗೂ ದಕ್ಷಿಣೆ ಲಭಿಸುತ್ತಿತ್ತು. ದಸರೆಯ ದಿನದಂದು ಬನ್ನಿ ಕೊಟ್ಟು ತಾತನ ಆರ್ಶಿವಾದ ಪಡೆಯಲು ಇಡೀ ಊರಿನವರ ಪೈಪೋಟಿಯೇ ಇರುತ್ತಿತ್ತು. ಅಂದು ಅವರ ರೆವಿನ್ಯೂ ಜೋರಾಗಿರುತ್ತಿತ್ತು. ರೊಕ್ಕ ಎಣಿಸಿಕೊಡುವ ನೆಪದಲ್ಲಿ ಒಂದೈದು ರೂಪಾಯಿಯನ್ನು ಎಗರಿಸುತ್ತಿದ್ದೆ. ತಾತ ಅವರ ಜೋತಿಷ್ಯ ಅದ್ಭುತವಾಗಿತ್ತು. ಲೋಬಾನ ಮಂತ್ರಿಸಿ ಕೊಡುವುದು, ದಿನ ತುಂಬಿದ ಗರ್ಭಿಣಿಯರು ತಾತ ಮಂತ್ರಿಸಿದ ಬೆಲ್ಲ ತಿಂದು ಪ್ರಸವ ಸರಾಗವಾಗುತ್ತಿತ್ತು. ಮೇಲುಮುದ್ದೆ ಹಾಕಿದ ಮನೆ. ಆಗಾಗ ಮಣ್ಣು ಉದುರುತ್ತಿತ್ತು. ಬಂಕ ಸೇರಿಕೊಂಡು ೫ ಖೊಲಿಗಳ ಮನೆ. ಅಡುಗೆ ಮನೆಗೆ ನೆಲಹಾಸು ಇರಲ್ಲಿಲ್ಲ. ಗೋಮಯದಿಂದ ಸಾರಿಸುತ್ತಿದ್ದರು. ಪತ್ನಿಯನ್ನು ಕಳೆಕೊಂಡಿದ್ದ ತಾತನ ಸೇವೆಗಾಗಿ ಹುಲಿಹೈದರಿನ  ದೊಡ್ಡವ್ವನ ಮಗಳು ನಮ್ಮಕ್ಕ ಸುಧಾ ಇದ್ದಳು.   ಒಂದ್ಸಾರಿ, ತಮ್ಮ ಪ್ರಹ್ಲಾದ್ ಗಿಡದಿಂದ ಬಿದ್ದು ತಾನೆ ದವಾಖಾನಿಗೆ ಹೋಗಿ ಅರವಳಿಕೆ ಇಲ್ಲದ ಕಾರಣ ಹಾಗೇಯೆ ಹೊಲಿಗೆ ಹಾಕಿಸಿಕೊಂಡು ಮನೆಗೆ ಬಂದಿದ್ದ. ಇನ್ನೊಬ್ಬ ತಮ್ಮ ಪ್ರಾಣೇಶ ಶ್ರೀ ಹಾಲುಭಾವಿ ವೀರಣ್ಣ (ವೀರಭದ್ರ) ಗುಡಿಯ ಬಳಿಯ ಗುಡ್ಡದ ಎರಡು ದೊಡ್ಡ ಕಲ್ಲುಗಳ ಸಂದಿಯಲ್ಲಿ ಜಾರಿ ಬಿದ್ದಿದ್ದ. ಅವನನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು. ದೇವರ ದಯೆಯಿಂದ ಬೇಗನೆ ಚೇತರಿಸಿಕೊಂಡ. ನಂತರ ನಾವು, ನಮ್ಮ ತಂದೆಯವರು ಕಾರ್ಯನಿರ್ವಹಿಸುವ ಶಿವಮೊಗ್ಗಾ ಜಿಲ್ಲೆಯ ಹೊಸನಗರಕ್ಕೆ  ಸ್ಥಳಾಂತರಗೊಂಡೆವು. ಆಮೇಲೆ, ಬೇಸಿಗೆ ರಜದಲ್ಲಿ ಮುದಗಲ್ ಗೆ  ಬರುವುದನ್ನು ಶುರುವಿಟ್ಟು ಕೊಂಡೆವು. ವರಮಾನದ ಕೊರತೆಯೋ ಏನೋ, ತಾತ ಅಪರೋಕ್ಷವಾಗಿ  ಎಷ್ಟು ದಿವ್ಸ ಇರ್ತಿರಿ,,,,,ನಾನು ರೊಕ್ಕದ ಗಿಡ ನೆಟ್ಟಿಲ್ಲ,,,,,ಭೇಟಿ ಆತಲ್ಲ ಇನ್ನ ನಡಿರಿ ನಿಮ್ಮೂರಿಗೆ ಎಂದಿದ್ದ. ನಮ್ಮಮ್ಮ, ನಡಿರೆಪಾ ತೌರ ಮನಿನೇ ಹೋಗು ಅಂದ್ಮೇಲೆ ಇಲ್ಲಿರಬಾರದು ಎಂದು ಲಗೇಜನೊಂದಿಗೆ ಸಿದ್ಧ ರಾಗಿ ಕಣ್ಣಿರಿಡುತ್ತ ಅಮ್ಮ ಹೋಗಿಬರುವ ಆರ್ಶಿವಾದ ಪಡೆಯಲು ತಾತನ ಕಾಲಿಗೇರಗಿ ಇನ್ನೇನು ತಲಬಾಗಿಲು ದಾಟಬೇಕು,,,, ಅಷ್ಟರಲ್ಲಿ ಮಿಂಚಿನಂತೆ ಓಡಿಬಂದು ತಾತ ಅಡ್ಡ ನಿಂತಿಂದ್ದ. ಎರಡೂ ಕಣ್ಣಗಳಲ್ಲಿ ಅಶ್ರುಗಳು ಭೋರ್ಗರೆಯುತ್ತಿದ್ದವು. ಅದೆಂಗ್ಹ ಹೋಗ್ತಿರಿ,,,,,ಸಿಟ್ನಾಗ ಏನ ಅಂದ್ರ ಅದನ್ನ ಖರೆ ಮಾಡ್ತೀಯೇನು ಸೀತಿ( ಸೀತಾ ನಮ್ಮಮ್ಮನ ಹೆಸರು)ಹೀಗೆ ಹೇಳಿ ಮತ್ತೊಂದು ತಿಂಗ್ಳು ಮುದಗಲ್ ನಲ್ಲಿಯೇ ಉಳ್ಸಿಕೊಂಡದ್ದನ್ನ ಮರೆಯಲಾದು. ೧೯೭೪ರಲ್ಲಿ ಮುದಗಲ್ ನಿಂದ ಐದು ಬಸ್ ಬದಲಾಯಿಸಿ ಹೊಸನಗರಕ್ಕೆ ಬಂದು ನಮ್ಮನೆಲ್ಲ ಕಂಡು ಹೋಗಿದ್ದ. ತಾತ, ಪ್ರಯಾಣಕ್ಕೆ ಬಳಸುತ್ತಿದ್ದುದು 'ಹಸಿಬಿ' ಎಂಬ ಬಟ್ಟೆಯಿಂದ ಮಾಡಿದ ಆಗಿನ ಕಾಲದ ಸೂಟಕೇಸನ್ನ. ತಿರುಪತಿ,  ಮಂತ್ರಾಲಯಕ್ಕೆ ನಿಯಮಿತ ಭೇಟಿ ನೀಡ್ತಿದ್ದ. ಲಿಂಗ್ಸೂರಿನ ಶ್ರೀ ಕುಪ್ಪೆರಾಯನ ಜಾತ್ರೆಯಲ್ಲಿ ರಥದಲ್ಲಿ ಕೂರುವ ಅಧಿಕಾರ ಮಠಾಧಿಕಾರಿಯಾಗಿ ಇತ್ತು. ಶ್ರೀ ವರದೇಂದ್ರರ ಆರಾಧನೆಯಲ್ಲಿ ಒಮ್ಮೆ ಅಲಂಕಾರದ ಭೋಜನಕ್ಕೆ ಕುಳ್ಳಿರಿಸಿದ್ದರು. ಬಾಳೆ ಎಲೆಯಲ್ಲಿ ಬಡಿಸಲಾಗಿದ್ದ ಪಂಚಭಕ್ಷ್ಯ ಪರಮಾನ್ನ ಗಳನ್ನು ತಿನ್ನದೆ ಮಂತ್ರ ಹೇಳುತಿದ್ದ ತಾತನಿಗೆ  ಎಲ್ಲವನ್ನೂ ತಿನ್ನು ಎಂದು ಸಂಜ್ಞೆಯ ಮೂಲಕ ಹೇಳಿ ಆಮೇಲೆ ಬೈಯ್ಸಿಕೊಂಡಿದ್ದೆ. ಮುಂದೆ ೧೯೮೨ರಲ್ಲಿ ತನ್ನ ಪ್ರೀತಿಯ ಮಗಳು ಅಂದರೆ ನಮ್ಮಮ್ಮನ ಬಳಿಯೆ ಕಲಬುರಗಿ ಯಲ್ಲಿ  ಶ್ರೀಹರಿಯ ಪಾದ ಸೇರಿಕೊಂಡ. ತಾತನ ಪ್ರಭಾವ ನಮ್ಮ ಐದು ಮೊಮ್ಮಕ್ಕಳಲ್ಲಿ ಢಾಳಾಗಿದೆ. ಪದ್ಮ ಸುಶಿಲ ಮತ್ತು ರಮೇಶ ಆ ಇಬ್ಬರು ಮೊಮ್ಮಕ್ಕಳು.

No comments:

Post a Comment