Sunday, November 22, 2020

ಮಂಡಾಳುಂಡಿ

ಮಂಡಾಳುಂಡಿ

ಕ್ಷಮಿಸಿ ವಾಚಕ ಮಹಾಶಯರೆ. ಪುನಃ ನಿಮ್ಮನ್ನು ೭೦ರ ದಶಕದ ಮುದಗಲ್ ನಲ್ಲಿ ಕಳೆದ ಜೀವನದತ್ತ ಕರೆದುಕೊಂಡು ಹೋಗುವ ಇರಾದೆ ನನ್ನದು. ಎಂದಿನಂತೆ ನಿಮ್ಮ ಸಮ್ಮತಿಯಿದೆ ಎಂದು ಭಾವಿಸುತ್ತಾ,,,,,,ಬನ್ನಿ ಈಗ ಮುದಗಲ್ ಗೆ ಹೋಗುವಾ. ಅದು ೧೯೭೦ರ ಮುದಗಲ್. ಸಣ್ಣ ಊರೆಂದರೂ ಅಕ್ಕ ಪಕ್ಕದ ಹಳ್ಳಿಗಳಿಗೆ ಈ ಊರೇ ದೊಡ್ಡ ಪಟ್ಟಣ. ಆಗ, ತಾಲೂಕು ಕೇಂದ್ರ ಲಿಂಗ್ಸೂರಿಗಿಂತಲೂ ದೊಡ್ಡದಿತ್ತು. ನಮ್ಮೂರಿನಲ್ಲಿ ಸೋಮವಾ ಸಂತೆ ನೆರೆದಿರುತಿತ್ತು. ಹಳ್ಳಿಯವರು ಬಂದು ವ್ಯಾಪಾರ ಮಾಡಿ ತಮ್ಮ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳುತ್ತಿದ್ದರು. ಬೆಣ್ಣೆಯನ್ನು ನಮ್ಮೆದುರೆ ಕಾಸಿ ತುಪ್ಪವನ್ನು ವರ್ತನೆ ಮನೆಗಳಿಗೆ ಮಾರುತ್ತಿದ್ದರು. ಗಟ್ಟಿಯಾದ ಬೆಣ್ಣೆ ತುಪ್ಪವಾಗಿ ರೂಪಾಂತರ ಗೊಳ್ಳುವಾಗ ವಿಳೆಯದೆಲೆ ಹಾಕಿ ತುಪ್ಪದ ವಾಸನೆ ಘಂ ಎನ್ನುವಂತೆ ಮಾಡುತ್ತಿದ್ದರು. ತುಪ್ಪದಲ್ಲಿ ಮುಳಗು ಹಾಕಿದ ವಿಳೆದೆಲೆ ತಿನ್ನಲು ನಮ್ಮಲ್ಲಿ ಭಾರಿ ಪೈಪೋಟಿ ಇರುತ್ತಿತ್ತು.  ಇರಲಿ, ಸಂತೆ ಎಂದನಲ್ಲ, ಅಂದು ಜೇಜಿ ಯಂಕಣ್ಣನ ಅಂಗಡಿಯಲ್ಲಿ ಲಭಿಸುವ ಮಂಡಾಳುಂಡಿ ತಿನ್ಮುವುದು ನನ್ನ ಗುರಿ.ಮಂಡಾಳನ್ನು ಬೆಲ್ಲದ ಪಾಕದಲ್ಲಿ ಒಂದು ಹದಕ್ಕೆ ಬಂದಾಗ ಕಲೆಸಿ ಉಂಡಿ ಮಾಡಿರುತ್ತಿದ್ದರು. ನೋಡಲು ದೊಡ್ಡದಾಗಿ ಕಂಡರೂ, ಬಹಳ ಹಗುರವಿರುವ ಉಂಡಿ ತಿನ್ನುವಾಗಿನ ಆನಂದ ಈಗಿನ ಯಾವ ಸಿಹಿ ತಿಂಡಿಗೂ ಸಾಟಿ ಇಲ್ಲ ಬಿಡಿ. ನಮಗೆ ಸಂತಿ  ರೊಕ್ಕ ಅಂತಾ ೧೦ ಪೈಸೆ ನಮ್ಮ ಮುತ್ಯಾ ಭೀಮ್ ಭಟ್ ಕೊಡುತ್ತಿದ್ದರು.ಅದರ ಸಂಪಾದನೆಯೇ ಅಂದಿನ ನಮ್ಮ ಧ್ಯೇಯ ವಾಗಿರುತ್ತಿತ್ತು. ಒಂದೆರಡು ತಾಸು 'ಸಂತಿ ರೊಕ್ಕ ' ಎಂದು ಕೂಗುತ್ತಾ ಕಾಡಿ ಬೇಡಿದ ನಂತರ ೧೦ ಪೈಸೆ ನಮ್ಮ ಕೈಗೆ ಬೀಳುತ್ತಿದ್ದ ಆ ಘಳಿಗೆಯ ಸಂತಸ ಹೇಳಲು ಶಬ್ದಗಳು ಸಾಲವು. ಹೀಗೆ ಲಭಿಸಿದ ಹಣ ದಿಂದ ೨ಪೈಸೆ ಗೆ ಒಂದರಂತೆ ೫ ಮಂಡಾಳುಂಡಿಗಳನ್ನು ಉದರಕ್ಕೆ ಸೇರಿಸಿ ಕೃತಾರ್ಥನಾಗುತ್ತಿದ್ದೆ. ಮುದಗಲ್ ನ ಮನೆಗೆ ನೆಂಟರು ಬಂದು ಊರಿಗೆ ಹೊರಡುವಾಗ ಅವರಿಗೆ ನಮಸ್ಕರಿಸಿ ೧೦ ಪೈಸೆಯಿಂದ ಎರಡು ಪಾವಲಿ(೫೦ ಪೈಸೆ)ಯವರೆಗೆ ಸಂಪಾದಿಸುವ ಕಲೆ ಕರಗತ ವಾಗಿತ್ತು. ಉಂಡಿ ತಿನ್ನುವುದು ಬೇಡವೆನಿಸಿದಾಗ. ಬಸ್ ಸ್ಟಾಂಡ್ಯನಲ್ಲಿನ ಲಿಂಬುಳಿ ಪೆಪ್ಪರ್ ಮೆಂಟ ನಮ್ಮ ಎರಡನೆ ಆಯ್ಕೆ ಯಾಗಿರುತ್ತಿತ್ತು.  ಹೊತ್ಯು ಮೀರಿದ ಸಮಯದಲ್ಲಿ ನಮ್ಮ ಮನೆಯ ಮಸಾಲಾ ಪದಾರ್ಥಗಳಿಗಾಗಿ ಜುಟ್ಲ ರಾಮಣ್ಣನ ಮನೆ:ಅಂಗಡಿ  ಸದಾ ಸಿದ್ಧವಿರುತ್ತಿತ್ತು. ಸ್ವಲ್ಪ ಮುಂದೆ ಸಾಗಿದರೆ, ಕೊಡೆಕಲ್ ಬಸಣ್ಣನ ಅಂಗಡಿ. ಹಾಗೆ ಮುಂದೆ ಸಾಗಿದರೆ ಕಿರಾಣಾ ಬಝಾರನಲ್ಲಿ ಯಾಲಕ್ಕಿ ಬಸಪ್ಪ, ತಾವಗೇರೆ ಯಂಕಣ್ಣ, ಬಾಳಪ್ಪ, ಸೀನಪ್ಪ ಹೀಗೆ ಅಂಗಡಿಗಳ ಸಾಲೆ ಇದ್ದವು. ಅವರೆಲ್ಲರು ನನ್ನನ್ನು ಆಚಾರ್ಯ ಎಂದು ಕರೆಯುತ್ತಿದ್ದರು. ಮದುವೆ ಮುಂಜಿಗಳಲ್ಲಿ ನಾನು ನಮ್ಮ ಮುತ್ಯಾ ಅವರರೊಂದಿಗೆ ಹೋಗಿರುತ್ತಿದ್ದೆ. ದಕ್ಷಿಣೆಯ ರೂಪದಲ್ಲಿ ಒಂದಷ್ಟು ಸಂಪಾದನೆಯೂ ಇರುತ್ತಿತ್ತು.  ಒಟ್ಟಿನಲ್ಲಿ, ಆ ದಿನಗಳ ಆತ್ಮೀಯತೆ ಇಂದಿನ ಕಾಲಮಾನದಲ್ಲಿ  ಕಾಣ ಸಿಗುವಿದು ವಿರಳ.

No comments:

Post a Comment