Sunday, November 22, 2020

ಸಂತಿ ರೊಕ್ಕ

ಸಂತಿ ರೊಕ್ಕ:೧೯೭೩ರ ಆಸು ಪಾಸಿನ ಕಾಲಘಟ್ಟ ಅದು.

ಮುದಗಲ್ ನಲ್ಲಿ ನಮ್ಮ ಪ್ರಾಥಮಿಕ ಶಿಕ್ಷಣದ ದಿನಗಳವು. ಸುತ್ತಾ ೫೦ ಗ್ರಾಮಗಳಿಗೆ ದೊಡ್ಡೂರು ಮುದಗಲ್. ಸೋಮವಾರ ಸಂತಿ ಇರ್ತದ. ನಮ್ ತಾತ ಭೀಮ್ ಭಟ್ ಜೋಶಿ ಅವರ ಮನೆಯಲ್ಲಿ ನಮ್ಮ ವಾಸ್ತವ್ಯ. ತಾತ ವೈದಿಕ ಬ್ರಾಹ್ಮಣರು ಮತ್ತು ಜೋಯಿಸರು. ಪ್ರತಿ ಸೋಮವಾರ ಪಿಕಳಿಹಾಳ್ ನಿಂದ ಗಂಗವ್ವ ಎಂಬುವವರು ವರ್ತ್ನಿ ತುಪ್ಪ ಕೊಡ್ತಿದ್ರು. ನಮ್ ತಾತನ ಮನ್ಯಾಗ,,,,ಬೆಣ್ಣಿ ಕಾಸಿ ಕೊಡ್ತಾ ಇದ್ದ ಪರಿ ಶುದ್ಧ ತುಪ್ಪ ಅದು. ತುಪ್ಪ ಒಂದು  ಹದಕ್ಕೆ ಬಂದಾಗ ಅದರಲ್ಲಿ ವಿಳೆದೆಲೆ ಹಾಕ್ತಾ ಇದ್ರು. ಅದನ್ನು ತಿನ್ಲಿಕ್ಕೆ ನಮ್ಮಲ್ಲಿ ಭಾರಿ ಪೈಪೋಟಿ ಇತ್ತು. ಅದರ ರುಚಿ ಬಲ್ಲವ್ರಿಗೆ ಗೊತ್ತು. ಆಗೆಲ್ಲ,ಮಕ್ಳಿಗೆ ೧೦ ಪೈಸೆ(ಅಥವಾ ಹೆಚ್ಚು)ಸಂತಿ ರೊಕ್ಕ ಅಂತಾ ಕೊಡ್ತಿದ್ರು. ನಾವು, ಮುತ್ಯಾ ಸಂತಿ ರೊಕ್ಕ ಅಂತಾ ಕೈಯೊಡ್ಡಿ ನಿಲ್ತಾ ಇದ್ವು. ಒಂದೆರಡು ತಾಸು ನಿರಂತರ ಕೇಳುವಿಕೆಯ ನಂತರ ೧೦ ಪೈಸಾ ನಾಣ್ಯ ನಮ್ ಕೈಗೆ ಬೀಳುತ್ತಿತ್ತು. ಆಗ ನಮ್ಗೆ, ಸ್ವರ್ಗಕ್ಕೆ ಮೂರೆ ಗೇಣು. ಓಡಿ ಹೋಗಿ ಸಂತಿಯೊಳ್ಗ ಬೆಲ್ಲದ ಜಿಲೇಬಿ, ಬೆಂಡು ಬತ್ತಾಸು, ಡಾಣಿ  ಹೀಗೆ ತರಹೆವಾರಿ ತಿನಿಸುಗಳು ನಮ್ ಉದರಕ್ಕ ಸೇರ್ತಿದ್ದವು. ಆ ಖುಷಿ ಮುಂದ,,,,ಈಗಿನ ಎಲ್ಲ ಖುಷಿ ಗೌಣ. ತಾತಾನ ಜೊತೆ ಸಂತಿಗೆ ಹೋದ್ರ ಸಿಗೋ ತಿನಿಸುಗಳೆ ಬೇರೆ. ಯಂಕ್ಯಾ, ಫೇಡ್ಯಾ ಬೇಕೆನ್ಲೆ ಅನ್ನುತ್ತ ನನ್ನ  ಉತ್ತರಕ್ಕೂ ಕಾಯದೇ ಎರಡೂ ಮುಷ್ಟಿ ತುಂಬ ಫೇಡ್ಯಾ ನೀಡಿದ ತಾತನ ಪ್ರೀತಿ ನೆನೆದರೇ ಹನಿಹಣ್ಣಾಗುತ್ತೇನೆ. ತಾತ ಎಷ್ಟೇ ಬಲವಂತ ಮಾಡಿದರೂ, ಅಪ್ಪಾರ ಅಪ್ಪಾರ ನಿಮ್ ಹತ್ರ ರೊಕ್ಕ ತಗೊಂಡ ನರಕಕ್ಕ ಹೋಗಂತಿರೇನು ಎನ್ನುವ ಹಳ್ಳಿಗರ ಮುಗ್ಧತೆ ಈಗೆಲ್ಲಿ. ಮುಂದೆ ತಂದೆ ಮುದಗಲ್ ರಾಘವೇಂದ್ರ ರಾವ್ ಅವರ ಜೊತೆ ನಾವೆಲ್ಲ ದೂರದ ಹೊಸನಗರಕ್ಕೆ ಹೋಗುವಾಗ, ಸಣ್ಣ ಮಗುವಿನ ಹಾಗೆ ಕಣ್ಣಿರಿಟ್ಟ ತಾತನ ಚಿತ್ರ ಇನ್ನೂ ಮಾಸಿಲ್ಲ.  ಬೇಸಿಗೆ ಮುನ್ನವೆ ಪತ್ರ ಬರೆದು ಬೇಸಿಗೆಗೆ ನಮ್ಮನೆಲ್ಲ ಕರೆಸಿಕೊಂಡು ಮನಸೋ ಇಚ್ಚಾ ನಮ್ಮ ಹೊಲದ ಚಂದ್ರ ಮಾವು ಹೋಳಿಗೆ ಮಾವಿನ ಸಿಕರಣೆ ತಿನ್ನಿಸಿ,,,,ಹೊರಡುವ ದಿನದಂದು ಮತ್ತದೆ ಕಣ್ಣಿರು,,,,ಅಮ್ಮನಿಗೆ ಸೀರಿ,,,,ನಮಗೆಲ್ಲಾ ಹೊಸ ಬಟ್ಟಿ,,,,ಜೇಬ್ ನ್ಯಾಗ ೫ ರೂಪಾಯಿ ಇರಿಸಿ ಬೀಳ್ಕೊಡುತ್ತಿದ್ದ ತಾತನ ಪ್ರೀತಿ   ಮುಂದ ಯಾವುದು ಸಾಟಿ ಇಲ್ಲ. ಒಂದ್ಸಾರಿ ಬ್ಯಾಸಗಿಗೆ ನಾವ್ ಹೋಗಿರ್ಲಿಲ್ಲ,,,,ಹುಬ್ಬಳ್ಳಿ, ಶಿರಸಿ, ಸಾಗರದ ಮೂಲಕ, ೪ ಬಸ್ ಗಳನ್ನು ಬದಲಾಯಿಸಿ ಹೊಸನಗರ ತಲುಪಿ ನಮ್ಮನೆಲ್ಲಾ ತಬ್ಬಿಕೊಂಡು ಪ್ರೀತಿಯ ಮಳೆಯೇ ಸುರಿಸಿದ್ದ. ನೆನೆಸಿಕೊಂಡರೆ,,,ಈಗಲೂ ಕಣ್ಣುಗಳು ಮಂಜಾಗುತ್ತವೆ. ಪ್ರೀತಿಯ ಮಳೆ ಸುರಿಸುವ ತಾತ, ಅಪ್ಪಾ ,ಅಮ್ಮ ಅವರೆಲ್ಲರನ್ನು  ಜಲ್ದೀನೆ ಕಳೆದುಕೊಂಡ ತಬ್ಬಲಿಗಳು ನಾವು.

No comments:

Post a Comment