Sunday, November 22, 2020

೧೯೭೭

1977

ಅವು ೧೯೭೭ರ ಕಾಲಘಟ್ಟದ ದಿನಗಳು. ೧೦ನೆ ಇಯತ್ತೆಯಲ್ಲಿ  ೨ನೆ ದರ್ಜೆಯಲ್ಲಿ ನಾನು ಉತ್ತೀರ್ಣನಾಗಿ ಅಪ್ಪ ಅಮ್ಮ ಸಂತಸದ ಕಡಲಲ್ಲಿ ತೇಲಿದ್ದರು. ಜೊತೆಗೆ ಗಣಿತದಲ್ಲಿ ೧೦೦ಕ್ಕೆ ೭೫ ಅಂಕ ಗಳಿಸಿ 'ಶ್ಯಾಣ್ಯಾ' ಎಂಬ ಗರಿ ಬೇರೆ ನನ್ತಲೆಗೇರಿತ್ತು.ಅಪ್ಪ  ಅವರು ಶಾಲಾ ಮಾಸ್ತರ. ದುಡಿಯುವ ಕೈ ಎರಡು. ೫ ಮಕ್ಕಳ ತುಂಬು ಸಂಸಾರ. ಬರುವ ಪಗಾರದಲ್ಲಿ ನಮ್ಮೆಲ್ಲರ ತುತ್ತಿನ ಚೀಲ ತುಂಬಿಸುತ್ತಿದ್ದ ಅಮ್ಮನ ಚಾಣಾಕ್ಷ ಮತಿಗೆ ಜೈ ಅನ್ನಲೇ ಬೇಕು. ಅಪ್ಪನ ಆರ್ಥಿಕ ಹೊಣೆಗಾರಿಕೆಗೆ ಹೆಗಲು ಕೊಡುವ ಉದ್ದೇಶದಿಂದ ನಾನು ನನ್ನ ಇಷ್ಟದ ಬ್ಯಾಂಕ್ ನೌಕರಿಯ ಆಸೆಗೆ ತಿಲಾಂಜಲಿ ಇಟ್ಟು ಬೇಗನೆ ನೌಕರಿ ಸಿಗುವ Diploma in Civil Engg ಆಯ್ಕೆ ಮಾಡಿ ಕೊಂಡಿದ್ದೆ. ಸರಕಾರಿ ಕೋಟಾದಡಿಯೇ ಸೀಟು ಸಹ ಸರಕಾರಿ ಪಾಲಿಟೆಕ್ನಿಕ್ ರಾಯಚೂರಿನಲ್ಲಿ ಸಿಕ್ಕಿತ್ತು. ಪ್ರಾತಃಸ್ಮರಣೀಯರಾದ ಪೇಜಾವರ ಶ್ರೀ ಗಳು ಸ್ಥಾಪಿಸಿದ ರಾಯಚೂರಿನ ಮಧ್ವಮಂಡಲದಲ್ಲಿ ನನ್ನ ವಾಸದ ಹಾಗೂ ಊಟದ ವ್ಯವಸ್ಥೆಯನ್ನು ಅಪ್ಪ ಮಾಡಿದ್ದರು. ಮೊದಲ ಸಲ ಅಪ್ಪ ಅಮ್ಮರಿಂದ ಅಗಲಿ ಮಸ್ಕಿಯಿಂದ ರಾಯಚೂರು ಗೆ ನಾನು ಹೋಗುವ ದಿನದಂದು ಅಮ್ಮನ ಬಟ್ಟುಲು ಕಣ್ಣುಗಳಿಂದ ಅಶ್ರುಧಾರೆಗೆ ಬಿಡುವೇ ಇರಲಿಲ್ಲ. ಅಪ್ಪನ ಅಕ್ಷಿಗಳಲ್ಲೂ ಕಣ್ಣಿರ ಧಾರೆ. ಇನ್ನೂ, ನಾನಂತೂ, ರಾಯಚೂರುಗೆ ಹೊರಡುವ ದಿನದಂದು ಅತ್ತು ಅತ್ತು ಬಸವಳಿದಿದ್ದೆ. ಭಾರವಾದ ಹೃದಯದಿಂದ ಮಸ್ಕಿ ಯಿಂದ ರಾಯಚೂರಿಗೆ ಬಂದಿದ್ದೆ.  ಮೊದಲನೆ ದಿನ ಏನೋ ಕಾತರ. ಹೊಸ ಪರಿಸರ, ಹೊಸ ಸ್ನೇಹಿತರು ಮನ ಪುಳಕಗೊಂಡಿತ್ತು. ಕ್ಲಾಸ್ ಮುಗಿಸಿಕೊಂಡು ಮಧ್ಯಾನ್ಹ ಊಟಕ್ಕೆ ಬಂದಾಗ ಸಮಸ್ಯೆ ಶುರು ಆಯಿತು. ಅಮ್ಮನ ಕೈಯ ರುಚಿಕರ ಮುದ್ದಿಪಲ್ಯ, ಭಕ್ರಿ, ಕಡುಬು, ಗಿಲಗಂಚಿ, ಬೆಸನ್ ಉಂಡಿ ಮಂಡಾಳ ಓಗ್ಗರಣಿ, ಥಾಲಿಪಟ್ಟು ಇತ್ಯಾದಿಗಳನ್ನು ತಿಂದಿದ್ದ ನನ್ನ ಮನ ಮಧ್ವ ಮಂಡಳದ ಊಟವನ್ನು ಒಪ್ಪಲೇ ಇಲ್ಲ. ಅಳು ತಡೆಯಲಾಗಲಿಲ್ಲ, ಅಳುತ್ತಲೇ ಇದ್ದ ನನ್ನನ್ನು ಮೇನೆಜರ ದಿವಾನಜಿ ಅವರು ಬೆನ್ನ ಮೇಲೆ ಕೈಯಾಡಿಸಿ ಸಂತೈಸಿದರೂ ಊಟ ಸೇರಿರಲಿಲ್ಲ. ರಾಯಚೂರಿನಲ್ಲಿಯೇ ಇದ್ದ ನನ್ನ ಸೋದರತ್ತೆ(ಅಪ್ಪನ ಅಕ್ಕ)ಕಮಲವ್ವನ ಮನೆಗೆ ಹೋಗಿ ಹೊಟ್ಟೆ ತುಂಬಾ ತಿಂದಿದ್ದೆ. ಅಪ್ಪ ಅಮ್ಮಾ ನನ್ನ ಕಷ್ಟ ನೋಡಲಾರದೆ, ಕೊನೆಗೆ ರಾಯಚೂರಿನಲ್ಲಿಯೇ ಮನೆ ಮಾಡಿದರು. ಇದರಿಂದಾಗಿ ಅಮ್ಮ ರುಚಿಕರ ಊಟ ಪುನಃ ನನಗೆ ಲಭಿಸುವಂತಾಗಿತ್ತು. ಅವರ ಪ್ರೀತಿಗೆ ಸಾಟಿಯೇ ಇಲ್ಲ. ನಾವು ೫ ಜನ ಅವರ ಆರ್ಶಿವಾದದಿಂದ ಸರಕಾರಿ ನೌಕರಿ(ಕೊನೆ ತಮ್ಮ ವಿದೇಶದಲ್ಲಿದ್ದಾನೆ) ಪಡೆದುಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ನಮ್ಮ ಏಳ್ಗೆಯನ್ನು ನೋಡಿ ಸಂತಸ ಪಡುವ ಭಾಗ್ಯ ಅಪ್ಪ ಅಮ್ಮನಿಗಿರಲಿಲ್ಲ. ೧೯೯೧ರಲ್ಲಿ ಅಪ್ಪ ,೧೯೯೫ರಲ್ಲಿ ಅಮ್ಮಾ ಶ್ರೀ ಹರಿಯ ಪಾದ ಸೇರಿಕೊಂಡು ಅಲ್ಲಿಂದಲೇ ನಮ್ಮನ್ನು ಹರಸುತ್ತಿದ್ದಾರೆ. ಮೊಂಬತ್ತಿಯ ಹಾಗೆ ನಮ್ಮ ಬದುಕನ್ನು ಬೆಳಕು ಮಾಡಿದ ಅಪ್ಪ ಅಮ್ಮ ಏಳು ಜನ್ಮಕ್ಕೂ ಇವರೇ ನನ್ನ ಜನ್ಮದಾತರಾಗಲಿ ಎನ್ನುವುದೇ  ನಮ್ಮ ಆಶಯ.

No comments:

Post a Comment