Sunday, November 22, 2020

ಬಾಲ್ಯದ ಅಟ-ಆ ಹುಡುಕಾಟ

ಬಾಲ್ಯದ ಆಟ,,,,,ಆ ಹುಡುಗಾಟ


ಮುದಗಲ್ ನಲ್ಲಿಯ ನನ್ನ ಬಾಲ್ಯದ ನೆನಪುಗಳು ಯಾವಾಗಲೂ ಮಧುರ ಅಲೆಗಳನ್ನು ಉಕ್ಕೆರಿಸುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಜನೆಯ ಕಾಲಘಟ್ಟ ಅದು. ಪಾಠ ಮಾಡುವುದಾದಮೇಲೆ ಮಾಸ್ತರ್ ಪ್ರಶ್ನೆ ಕೇಳುತ್ತಿದ್ದರು. ಉತ್ತರ ಹೇಳದವರನ್ನು ನಿಲ್ಲಿಸುತ್ತಿದ್ದರು. ಉತ್ತರ ಗೊತ್ತಿರುವವರು ಕೈ ಎತ್ತಬೇಕಿತ್ತು. ಆಗ ನಾನು ಶ್ಯಾಣ್ಯಾ ಎಂದೆ ಗುರುತಿಸಲ್ಪಟ್ಟಿದ್ದೆ(ಈಗ?????). ನಾನು ಕೈ ಮೇಲೆತ್ತುತ್ತಿದ್ದೆ. ಆಗ, ನನ್ನ ಸಹಪಾಠಿ ಭಾಗ್ಯಶ್ರೀ ' ಈಗ  ಕೈ ಎತ್ತ ಬ್ಯಾಡ,,,,ಇನ್ನೊಂದಿಷ್ಟ ಹುಡುಗ್ರು ನಿಂದಲ್ರಿ,,,,ಮೂಗ ಹಿಡದ ಕಪಾಳಕ್ಕ ಹೊಡಿಬಹುದು' ಅಂತಾ ಹೇಳಿದ್ಳು. ಉತ್ತರ ತಿಳಿಯದಿರುವವರಿಗೆ ಉತ್ತರ ಹೇಳಿದವರು ಮೂಗೂ ಹಿಡಿದು ಹೊಡೆಯ ಬೇಕಿತ್ತು. ಜಾಸ್ತಿ ಗೆಳೆಯರಿಗೆ ಹೊಡೆಯ ಬಾರದು ಎನ್ನುವ ಸದಿಚ್ಛೆ ನನ್ನದಾಗಿತ್ತು. ಉತ್ತರ ಹೇಳಿದ ನಂತರ ಮಾಸ್ತರ್ ಅವ್ರು ಉತ್ತರ ಹೇಳದ ೫ ಸಹಪಾಠಿಗಳಿಗೆ  ಕಪಾಳಕ್ಕೆ ಹೊಡೆಯಲು ಅಣತಿ ನೀಡಿದರು. ಸಹಪಾಠಿಗಳ ಮೇಲೆ ಅನುಕಂಪ ಇದ್ದ ನಾನು ಸುಮ್ನೆ ಹೊಡೆಯುವ ಶಾಸ್ತ್ರ ಮಾಡಿದೆ. ಮಾಸ್ತರ್ ಸಿಟ್ಟು ನೆತ್ಯಿಗೇರಿತು. ' ಅಲ್ಲಲೇ ಕಪಾಳ ಹೊಡಿಲೇ ಅಂದರ ದೋಸ್ತ್ರ ಗಲ್ಲ ಸವರರ್ತಿ,,,,ಇಲ್ಲಿ ಬಾ ಹ್ಯಾಂಗ್ ಹೊಡಿಬೇಕು ಅಂತಾ ನಾ ತೋರರ್ಸತೀನಿ' ಅಂದ ಕಪಾಳಕ್ಕೆ ಒಂದು ಬಿಟ್ಟರು. ಒಂದು ಕ್ಷಣ ತಲೆ ಗಿರಗುಟ್ಟಿದ ಹಾಗಾಗಿತ್ತು. ಆಮ್ಯಾಲ, ತೋಗೋರಿ, ನಾನು ಕೈ ಸಡಿಲ ಬಿಟ್ಟು ಕಪಾಳಕ್ಕ ಬಾರ ಮೂಡು ಹಂಗ ಹೊಡದಿದ್ದೆ. ಒಬ್ಬಾಂವನ ಮೂಗಿನಾಗಿನ ಶ್ರೀಮಂತಿಕೆ ಎಲ್ಲಾ ಹೊರಗ ಬಂದಿತ್ತು. ನಾಗರಾಜ ರಾವ್ ಅನ್ನೊ ಮಾಸ್ತರ್ ಇದ್ರು. ಅವರ ಪತ್ನಿ ಯೂ ಟೀಚರ್. ದೂರದ ಮೈಸೂರಿಮವರು. ಅವರು ನಮಗೆ ದೈಹಿಕ ಶಿಕ್ಷಣ ಹೇಳಿ ಕೊಡ್ತಿದ್ರು. ಲೇಜಿಂನ್ನು ಲಯಬದ್ಧ ವಾಗಿ ನುಡಿಸುತ್ತಾ,  ಹಾಡುತ್ತಾ ಕುಣಿಯುತ್ತಾ ಬಹಳ ಆನಂದದಿಂದ ಕಲಿಯುತ್ತಿದ್ದೆವು. ಮೇಲಾಧಿಕಾರಿಗಳ ವೀಕ್ಷಣೆ ದಿನದಂದು ಶ್ಯಾಣಾ ಹುಡುಗರನ್ನ ಇಡೀ ತರಗತಿಯಲ್ಲಿ ಒಂದೊಂದು ಸಾಲಿಗೆ ಒಬ್ಬರಂತೆ ಕುಳ್ಳಿರಿಸಿ, ಪ್ರಶ್ನೆ ಕೇಳಿದಾಗ ಆ ವಿದ್ಯಾರ್ಥಿಯೇ ಉತ್ತರ  ನೀಡುವಂತೆ ನೋಡಿಕೊಂಡು ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಿದ್ದರು. ಪ್ರತಿ ದಿನವೂ ಪ್ರಾರ್ಥನೆ ನಂತರ ,ಪಂಚಾಂಗ ಪಠಣ, ನುಡಿಮತ್ತು ಹೇಳುವುದು ಇರುತ್ತಿತ್ತು. ಒಮ್ಮೆ, ಅಧಿಕಾರಿಗಳು ಪ್ರಾರ್ಥನೆ ಸಮಯದಲ್ಲಿ ಉಪಸ್ಥಿತಿಯಲ್ಲಿ ನನ್ನ ತಮ್ಮ ಪ್ರಹ್ಲಾದ್ (ಭೀಮ್ಭಟ್ರ ಪಲ್ಯ ಅವನ ಜನಪ್ರಿಯ ನಾಮಧೇಯ) 'ಅಧಿಕಾರ ಬಂದಾಗ ಅರಿತು ನಡೆ' ಎಂಬ ನಾಣ್ಣಿಡಯನ್ನ ಹೇಳಿಬಿಟ್ಟ. ಹೆಡ್ ಮಾಸ್ತರ್ ಸಂಕೋಚ ಭಾವದಿಂದ ಅಧಿಕಾರಿಯತ್ತ ಚಿತ್ತ ಹರಿಸಿದ್ದರು. ಆ ಅಧಿಕಾರಿ, ಸಿಟ್ಟಾಗದೆ, 'ಹುಡುಗರನ್ನ ಹೀಗೆಯೇ ಸಿದ್ದಪಡಿಸ ಬೇಕು' ಅವರು ಹೆದರ ಬಾರದು ಎಂದು ಹೇಳಿ ಮಾಸ್ತರ್ ರ ಅಂಜಿಕಿನ ದೂರ ಮಾಡಿದ್ರು ಅಂತಾ ಆಮೇಲೆ ಗೊತ್ತಾತು. ಒಮ್ಮೆ ವೀರಭದ್ರಪ್ಪ ಸರ್ ಅವರು ನಮ್ಮಿಂದ ನಾಟಕಾ ಮಾಡ್ಸಿದ್ರು. ಅಲ್ಲಿ ಭಿಕ್ಷೆ ಬೇಡುವ ದೃಶ್ಯ ಬರ್ತದೆ. ಹಿಮ್ಮೆಳದಲ್ಲಿ ಕಾಸು ನೀಡುವಂತೆ ಆಗ್ರಹಿಸಿ ಹಾಡು ಹಾಡ್ತಾಇದ್ರು. ಕರಗಿದ ಪ್ರೇಕ್ಷಕರು ನಾಣ್ಯಗಳನ್ನು ಎಸೆಯಲು ಶುರು ಮಾಡಿದ್ರು. ನಾನು ನನ್ನ ಪತ್ನಿಯ ಪಾತ್ರಧಾರಿ ದೋಸ್ತ,,,,ನಾಣ್ಯಗಳನ್ನು ಹೆಕ್ಕಿ ಕೊಳ್ಳಲು ನಾ ಮುಂದೂ ತಾ ಮುಂದೂ ಎಂದು ಪೈಪೋಟಿಗೆ ಬಿದ್ದೆವು. ಸರ್ ಸಂಜ್ಞೆಗೂ ಬಗ್ಗಿರಲಿಲ್ಲ. ನಾಟಕ ಮುಗಿದು 'ಆಹೇರು' ಶುರು ಆಯ್ತು. ನನ್ನ ತಾತ ಐದು ರೂಪಾಯಿ ನೀಡಿದ್ರು. ಹೆಕ್ಕಿದ ನಾಣ್ಯಗಳಲ್ಲಿ ಇಬ್ರೂ ಸಮಪಾಲು ತೋಗೋರಿ ಅಂತ ಸರ್ ಪರ್ಮಾನು ಹೊರಡಿಸಿದ್ರು. ಬಾಲ್ಯದ ಇನ್ನೊಂದೆರಡು ಸಂಗತಿ ನಾನು  ಹೇಳ್ಳೆ ಬೇಕು. ದೇಶಪಾಂಡೆ ಓಣಿಯ ಬಳಿ ಮಸೀದಿ ಇದೆ. ಸಂಜೆಯ ಸಮಯದಲ್ಲಿ 'ಸ್ಟಾಪ್' ಆಟದಲ್ಲಿ  ಕೆಲವರು ಅಡಗಿಕೊಳ್ಳಲು ಮಸೀದಿಯೊಳಗಿನ ಕಟ್ಟಿಗೆಯ ಶವವಾಹ ಪೆಟ್ಟಿಗೆಯನ್ನು ಬಳಸುತ್ತಿದ್ದರು. ಅವರಲ್ಲಿ ನನ್ನ ಇನ್ನೊಬ್ಬ ತಮ್ಮ ಪ್ರಾಣೇಶ(ಪಾಣಾ) ನೆನಸಿಕೊಂಡರೆ ಈಗ ಭಯವಾಗುತ್ತದೆ. ಮುದಗಲ್ನಲ್ಲಿ ಬೇಸಿಗೆಯ ರಜಾ ದಿನಗಳಲ್ಲಿ, ಬಾವಿಯಲ್ಲಿ  ಈಸಾಡುವ ಆನಂದ  ಅದ್ಭುತ. ದಿನವೂ ಮೂರು ತಾಸು ಈಜಾಟ. ಕಲಿಯುವವರಿಗೆ ನಾನೂ ಒಬ್ಬ ತರಬೇತುದಾರ. ಹುಡುಗರ ಬೆನ್ನಿಗೆ, ಕಟ್ಟಿಗೆಯ ಪೆಂಡಿ, ಡಬ್ಬ, ದೊಡ್ಡ ಒಣಗಿದ ಕುಂಬಳ ಕಾಯಿ ಕಟ್ಟಿ ಬಾವಿಗೆ ದೂಡುತ್ತಿದ್ದೆವು. ಅವರಿಗೆ ನೀರು ಕುಡಿಯದಿರಲು ಹಾಗೂ ಕೈ ಕಾಲುಗಳನ್ನು ಯಾವ ಲಯದಲ್ಲಿ ಆಡಿಸಬೇಕು ಎಂದು ಹೇಳಿ ಧೈರ್ಯ ತುಂಬುತ್ತಿದ್ದೆ. ನಾನು ಮುಳುಗು ತಜ್ಞನಾಗಿ ಬಾವಿಯಲ್ಲಿ   ಬಿದ್ದಿರುವ ತಂಬಿಗೆ, ಕೊಡ ಇತ್ಯಾದಿ ಗಳನ್ನು  ಎತ್ತಿ ಕೊಡುತ್ತಿದ್ದೆ. ಇನ್ನೂ, ದೀಪಾವಳಿಯ ಎಲ್ಲರ ಮನೆಯಲ್ಲಿನ ಆರತಿ, ಗೌರಿ ಪೂಜೆಯನಂತರದ ಸಿಹಿ ಪ್ರಸಾದ, ಅಃತಕರಣವೇ ಮೂರ್ತಿವೆತ್ತ  ಪಿಕಳಿಹಾಳ್ ಪದ್ದಕ್ಕ, ಗುಡಿ ಅಚ್ಚಕ್ಕ, ರಾಮ ಭಟ್ರ ರಂಗಕ್ಕ, ವೈನಿ, ಅಚ್ಚಂವತ್ತಿ ಹೀಗೆ ಹಲವಾರು ಹಿರಿಯ ಜೀವಗಳನ್ನು ಮರೆತೆನೆಂದರೂ ಮರೆಲಾರೆ.

No comments:

Post a Comment