Tuesday, November 24, 2020

Opinion about my letters

 https://m.facebook.com/story.php?story_fbid=3674763379229604&id=100000879335240

Sunday, November 22, 2020

ತಾತ

ತಾತ: ಅವು ೭೦ರ ದಶಕದ ಮುದಗಲ್ ನ ತಾತನ ಮನೆಯಲ್ಲಿ ಕಳೆದ ಪ್ರಾಥಮಿಕ ಶಾಲೆಯ ದಿನಗಳು. ನಮಗೆಲ್ಲ ಶಾಲೆಯ ಹೋಗುವ ಮೊದಲು ತಿಂಡಿ ಅಂತಾ ಏನು ಕೊಡ್ತಿರಲಿಲ್ಲ. ಹಿಂದಿನ ರಾತ್ರಿಯ ಊಟಕ್ಕೆ ಅನ್ನವನ್ನು ಸ್ವಲ್ಪ ಹೆಚ್ಚಿಗೆ ಮಾಡಿರುತ್ತಿದ್ದರು. ಮರುದಿನ ಅದಕ್ಕೆ ಸ್ವಲ್ಪ ಒಗ್ಗರಣೆ ಹಾಕಿ ಮೇಲೆ ಮೆಂತ್ಯದ ಹಿಟ್ಟು ಉದರಿಸಿರುತ್ತಿದ್ದರು. ಹಿರಿಯಣ್ಣನಾದ ನಾನು, ಅನ್ನವನ್ನು ಕ್ರಮಬದ್ದವಾಗಿ ಉಪ್ಪಿನೊಂದಿಗೆ ಕಲೆಸಿ ಇಬ್ಬರು ತಮ್ಮಂದಿರು ಸೇರಿಕೊಂಡು ಮೂರು ಭಾಗ ಮಾಡುತ್ತಿದ್ದೆ. ಮೂರು ಭಾಗ ಮಾಡುವಾಗ ಅಮಾಯಕ ತಮ್ಮಂದಿರ ಭಾಗದಲ್ಲಿ ರವಷ್ಟನ್ನು ನನ್ನ ಭಾಗಕ್ಕೆ ಎಳೆದುಕೊಂಡು ಬಿಡುತ್ತಿದ್ದೆ. ಅವೆರಡು, ಕಣ್ಣನ್ನು ಪಿಳಿ ಪಿಳಿ ಬಿಟ್ಟಿಕೊಂಡು ಪಾಲಿಗೆ ಬಂದದ್ದು ಪಂಚಾ‌ಮೃತ ಅಂತಾ ಉದರಕ್ಕೆ ಸೇರಿಸುತ್ತಿದ್ದರು. ಮೂಲತಃ ವೈದಿಕ ವೃತ್ತಿಯ ನಮ್ಮ ತಾತ ಭೀಮ ಭಟ್ ಜೋಶಿಗೆ ಹೇಳಿಕೊಳ್ಳುವ ಆದಾಯವಿರಲ್ಲಿಲ್ಲ. ವೈದಿಕ ಮತ್ತು ಜೋತಿಷ್ಯದ ಆದಾಯವೇ ಬದುಕು ಸವೆಸಲು ಮೂಲ ಸೆಲೆ. ಜೊತೆಗೆ ಮೂರು ವರ್ಷ ನಾವು ಬೇರೆ ದಾಂಗುಡಿ ಹಾಕಿದ್ದೆವು. ಆದರೂ, ನಮ್ಮ ತಾತನ ಹಣಕಾಸು ನಿರ್ವಹಣೆ ಅದ್ಭುತವಾಗಿತ್ತು. ವಿನಾಃ ಕಾರಣ ಯಾವುದೇ ಖರ್ಚಿಗೆ ಮುಂದಾಗದೆ ತಾತ ಬಂದ ಆದಾಯವನ್ನು ಕೂಡಿಡುತ್ತಿದ್ದರು. ರಜಾದಿನಗಳಲ್ಲಿ, ಮಂಡಾಳನ್ನು ಹುರಿದು ಚುರುಮುರಿ ಮಾಡಿ ಕೊಡುತ್ತಿದ್ದರು. ಅದರೊಳಗಿನ ಶೆಂಗಾ, ಪುಟಾಣಿಗಳನ್ನು ಹುಡುಕಿ ಹುಡುಕಿ ತಿನ್ನುವ ಮಜಾ ಏನು ಹೇಳಲಿ. ಮನೆಯಲ್ಲಿ ಹಿರಿಯರ ಶ್ರಾದ್ಧದ ದಿನಗಳಂದು, ಎಲ್ಲಾ ವಿಧಿಗಳು ಮುಗಿದು ಆಚಾರ್ಯರ ಭೋಜನ ನಂತವೇ ನಮ್ಮ ಸರದಿ. ಆದಾಗ್ಯೂ ತಾತ,ಆಚಾರ್ಯ ರಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ಗೋವಿಂದ ಎಂದು ಹೇಳಿ ಅವರು ಮೊದಲ ತುತ್ತು ಬಾಯಿಗೆ ಇಟ್ಟ ನಂತರ ನಮಗೆಲ್ಲ ಮಧ್ಯಂತರ ಪರಿಹಾರವಾಗಿ ಒಂದೊಂದು ರವಾ ಉಂಡಿಯನ್ನು ಕೊಟ್ಟಿರುತ್ತಿದ್ದರು. ಮೊದಲೆ ಹಸಿವಿನಿಂದ ಕಂಗೆಟ್ಟಿದ್ದ ನಾವುಗಳು ಕೈಗೆ ಬಂದ ಭಕ್ಷವನ್ನು ಕುಣಿದಾಡುತ್ತಾ ತಿನ್ನುತ್ತಿದ್ದೇವು. ತಾತ ಅವರು ಆಹ್ನಿಕ ಕಾರ್ಯ ಗಳಿಗೆ ಹೋದಾಗ ನಾವು ಹಿಂಬಾಲಿಸುತ್ತಿದ್ದೇವು. ಶ್ರೀ ಸತ್ಯನಾರಾಯಣ ಪೂಜೆ, ಶ್ರಾದ್ಧ ಇತ್ಯಾದಿಗಳಲ್ಲಿ ನಮಗೂ ದಕ್ಷಿಣೆ ಲಭಿಸುತ್ತಿತ್ತು. ದಸರೆಯ ದಿನದಂದು ಬನ್ನಿ ಕೊಟ್ಟು ತಾತನ ಆರ್ಶಿವಾದ ಪಡೆಯಲು ಇಡೀ ಊರಿನವರ ಪೈಪೋಟಿಯೇ ಇರುತ್ತಿತ್ತು. ಅಂದು ಅವರ ರೆವಿನ್ಯೂ ಜೋರಾಗಿರುತ್ತಿತ್ತು. ರೊಕ್ಕ ಎಣಿಸಿಕೊಡುವ ನೆಪದಲ್ಲಿ ಒಂದೈದು ರೂಪಾಯಿಯನ್ನು ಎಗರಿಸುತ್ತಿದ್ದೆ. ತಾತ ಅವರ ಜೋತಿಷ್ಯ ಅದ್ಭುತವಾಗಿತ್ತು. ಲೋಬಾನ ಮಂತ್ರಿಸಿ ಕೊಡುವುದು, ದಿನ ತುಂಬಿದ ಗರ್ಭಿಣಿಯರು ತಾತ ಮಂತ್ರಿಸಿದ ಬೆಲ್ಲ ತಿಂದು ಪ್ರಸವ ಸರಾಗವಾಗುತ್ತಿತ್ತು. ಮೇಲುಮುದ್ದೆ ಹಾಕಿದ ಮನೆ. ಆಗಾಗ ಮಣ್ಣು ಉದುರುತ್ತಿತ್ತು. ಬಂಕ ಸೇರಿಕೊಂಡು ೫ ಖೊಲಿಗಳ ಮನೆ. ಅಡುಗೆ ಮನೆಗೆ ನೆಲಹಾಸು ಇರಲ್ಲಿಲ್ಲ. ಗೋಮಯದಿಂದ ಸಾರಿಸುತ್ತಿದ್ದರು. ಪತ್ನಿಯನ್ನು ಕಳೆಕೊಂಡಿದ್ದ ತಾತನ ಸೇವೆಗಾಗಿ ಹುಲಿಹೈದರಿನ  ದೊಡ್ಡವ್ವನ ಮಗಳು ನಮ್ಮಕ್ಕ ಸುಧಾ ಇದ್ದಳು.   ಒಂದ್ಸಾರಿ, ತಮ್ಮ ಪ್ರಹ್ಲಾದ್ ಗಿಡದಿಂದ ಬಿದ್ದು ತಾನೆ ದವಾಖಾನಿಗೆ ಹೋಗಿ ಅರವಳಿಕೆ ಇಲ್ಲದ ಕಾರಣ ಹಾಗೇಯೆ ಹೊಲಿಗೆ ಹಾಕಿಸಿಕೊಂಡು ಮನೆಗೆ ಬಂದಿದ್ದ. ಇನ್ನೊಬ್ಬ ತಮ್ಮ ಪ್ರಾಣೇಶ ಶ್ರೀ ಹಾಲುಭಾವಿ ವೀರಣ್ಣ (ವೀರಭದ್ರ) ಗುಡಿಯ ಬಳಿಯ ಗುಡ್ಡದ ಎರಡು ದೊಡ್ಡ ಕಲ್ಲುಗಳ ಸಂದಿಯಲ್ಲಿ ಜಾರಿ ಬಿದ್ದಿದ್ದ. ಅವನನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು. ದೇವರ ದಯೆಯಿಂದ ಬೇಗನೆ ಚೇತರಿಸಿಕೊಂಡ. ನಂತರ ನಾವು, ನಮ್ಮ ತಂದೆಯವರು ಕಾರ್ಯನಿರ್ವಹಿಸುವ ಶಿವಮೊಗ್ಗಾ ಜಿಲ್ಲೆಯ ಹೊಸನಗರಕ್ಕೆ  ಸ್ಥಳಾಂತರಗೊಂಡೆವು. ಆಮೇಲೆ, ಬೇಸಿಗೆ ರಜದಲ್ಲಿ ಮುದಗಲ್ ಗೆ  ಬರುವುದನ್ನು ಶುರುವಿಟ್ಟು ಕೊಂಡೆವು. ವರಮಾನದ ಕೊರತೆಯೋ ಏನೋ, ತಾತ ಅಪರೋಕ್ಷವಾಗಿ  ಎಷ್ಟು ದಿವ್ಸ ಇರ್ತಿರಿ,,,,,ನಾನು ರೊಕ್ಕದ ಗಿಡ ನೆಟ್ಟಿಲ್ಲ,,,,,ಭೇಟಿ ಆತಲ್ಲ ಇನ್ನ ನಡಿರಿ ನಿಮ್ಮೂರಿಗೆ ಎಂದಿದ್ದ. ನಮ್ಮಮ್ಮ, ನಡಿರೆಪಾ ತೌರ ಮನಿನೇ ಹೋಗು ಅಂದ್ಮೇಲೆ ಇಲ್ಲಿರಬಾರದು ಎಂದು ಲಗೇಜನೊಂದಿಗೆ ಸಿದ್ಧ ರಾಗಿ ಕಣ್ಣಿರಿಡುತ್ತ ಅಮ್ಮ ಹೋಗಿಬರುವ ಆರ್ಶಿವಾದ ಪಡೆಯಲು ತಾತನ ಕಾಲಿಗೇರಗಿ ಇನ್ನೇನು ತಲಬಾಗಿಲು ದಾಟಬೇಕು,,,, ಅಷ್ಟರಲ್ಲಿ ಮಿಂಚಿನಂತೆ ಓಡಿಬಂದು ತಾತ ಅಡ್ಡ ನಿಂತಿಂದ್ದ. ಎರಡೂ ಕಣ್ಣಗಳಲ್ಲಿ ಅಶ್ರುಗಳು ಭೋರ್ಗರೆಯುತ್ತಿದ್ದವು. ಅದೆಂಗ್ಹ ಹೋಗ್ತಿರಿ,,,,,ಸಿಟ್ನಾಗ ಏನ ಅಂದ್ರ ಅದನ್ನ ಖರೆ ಮಾಡ್ತೀಯೇನು ಸೀತಿ( ಸೀತಾ ನಮ್ಮಮ್ಮನ ಹೆಸರು)ಹೀಗೆ ಹೇಳಿ ಮತ್ತೊಂದು ತಿಂಗ್ಳು ಮುದಗಲ್ ನಲ್ಲಿಯೇ ಉಳ್ಸಿಕೊಂಡದ್ದನ್ನ ಮರೆಯಲಾದು. ೧೯೭೪ರಲ್ಲಿ ಮುದಗಲ್ ನಿಂದ ಐದು ಬಸ್ ಬದಲಾಯಿಸಿ ಹೊಸನಗರಕ್ಕೆ ಬಂದು ನಮ್ಮನೆಲ್ಲ ಕಂಡು ಹೋಗಿದ್ದ. ತಾತ, ಪ್ರಯಾಣಕ್ಕೆ ಬಳಸುತ್ತಿದ್ದುದು 'ಹಸಿಬಿ' ಎಂಬ ಬಟ್ಟೆಯಿಂದ ಮಾಡಿದ ಆಗಿನ ಕಾಲದ ಸೂಟಕೇಸನ್ನ. ತಿರುಪತಿ,  ಮಂತ್ರಾಲಯಕ್ಕೆ ನಿಯಮಿತ ಭೇಟಿ ನೀಡ್ತಿದ್ದ. ಲಿಂಗ್ಸೂರಿನ ಶ್ರೀ ಕುಪ್ಪೆರಾಯನ ಜಾತ್ರೆಯಲ್ಲಿ ರಥದಲ್ಲಿ ಕೂರುವ ಅಧಿಕಾರ ಮಠಾಧಿಕಾರಿಯಾಗಿ ಇತ್ತು. ಶ್ರೀ ವರದೇಂದ್ರರ ಆರಾಧನೆಯಲ್ಲಿ ಒಮ್ಮೆ ಅಲಂಕಾರದ ಭೋಜನಕ್ಕೆ ಕುಳ್ಳಿರಿಸಿದ್ದರು. ಬಾಳೆ ಎಲೆಯಲ್ಲಿ ಬಡಿಸಲಾಗಿದ್ದ ಪಂಚಭಕ್ಷ್ಯ ಪರಮಾನ್ನ ಗಳನ್ನು ತಿನ್ನದೆ ಮಂತ್ರ ಹೇಳುತಿದ್ದ ತಾತನಿಗೆ  ಎಲ್ಲವನ್ನೂ ತಿನ್ನು ಎಂದು ಸಂಜ್ಞೆಯ ಮೂಲಕ ಹೇಳಿ ಆಮೇಲೆ ಬೈಯ್ಸಿಕೊಂಡಿದ್ದೆ. ಮುಂದೆ ೧೯೮೨ರಲ್ಲಿ ತನ್ನ ಪ್ರೀತಿಯ ಮಗಳು ಅಂದರೆ ನಮ್ಮಮ್ಮನ ಬಳಿಯೆ ಕಲಬುರಗಿ ಯಲ್ಲಿ  ಶ್ರೀಹರಿಯ ಪಾದ ಸೇರಿಕೊಂಡ. ತಾತನ ಪ್ರಭಾವ ನಮ್ಮ ಐದು ಮೊಮ್ಮಕ್ಕಳಲ್ಲಿ ಢಾಳಾಗಿದೆ. ಪದ್ಮ ಸುಶಿಲ ಮತ್ತು ರಮೇಶ ಆ ಇಬ್ಬರು ಮೊಮ್ಮಕ್ಕಳು.

ಬಾಲ್ಯದ ಅಟ-ಆ ಹುಡುಕಾಟ

ಬಾಲ್ಯದ ಆಟ,,,,,ಆ ಹುಡುಗಾಟ


ಮುದಗಲ್ ನಲ್ಲಿಯ ನನ್ನ ಬಾಲ್ಯದ ನೆನಪುಗಳು ಯಾವಾಗಲೂ ಮಧುರ ಅಲೆಗಳನ್ನು ಉಕ್ಕೆರಿಸುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಜನೆಯ ಕಾಲಘಟ್ಟ ಅದು. ಪಾಠ ಮಾಡುವುದಾದಮೇಲೆ ಮಾಸ್ತರ್ ಪ್ರಶ್ನೆ ಕೇಳುತ್ತಿದ್ದರು. ಉತ್ತರ ಹೇಳದವರನ್ನು ನಿಲ್ಲಿಸುತ್ತಿದ್ದರು. ಉತ್ತರ ಗೊತ್ತಿರುವವರು ಕೈ ಎತ್ತಬೇಕಿತ್ತು. ಆಗ ನಾನು ಶ್ಯಾಣ್ಯಾ ಎಂದೆ ಗುರುತಿಸಲ್ಪಟ್ಟಿದ್ದೆ(ಈಗ?????). ನಾನು ಕೈ ಮೇಲೆತ್ತುತ್ತಿದ್ದೆ. ಆಗ, ನನ್ನ ಸಹಪಾಠಿ ಭಾಗ್ಯಶ್ರೀ ' ಈಗ  ಕೈ ಎತ್ತ ಬ್ಯಾಡ,,,,ಇನ್ನೊಂದಿಷ್ಟ ಹುಡುಗ್ರು ನಿಂದಲ್ರಿ,,,,ಮೂಗ ಹಿಡದ ಕಪಾಳಕ್ಕ ಹೊಡಿಬಹುದು' ಅಂತಾ ಹೇಳಿದ್ಳು. ಉತ್ತರ ತಿಳಿಯದಿರುವವರಿಗೆ ಉತ್ತರ ಹೇಳಿದವರು ಮೂಗೂ ಹಿಡಿದು ಹೊಡೆಯ ಬೇಕಿತ್ತು. ಜಾಸ್ತಿ ಗೆಳೆಯರಿಗೆ ಹೊಡೆಯ ಬಾರದು ಎನ್ನುವ ಸದಿಚ್ಛೆ ನನ್ನದಾಗಿತ್ತು. ಉತ್ತರ ಹೇಳಿದ ನಂತರ ಮಾಸ್ತರ್ ಅವ್ರು ಉತ್ತರ ಹೇಳದ ೫ ಸಹಪಾಠಿಗಳಿಗೆ  ಕಪಾಳಕ್ಕೆ ಹೊಡೆಯಲು ಅಣತಿ ನೀಡಿದರು. ಸಹಪಾಠಿಗಳ ಮೇಲೆ ಅನುಕಂಪ ಇದ್ದ ನಾನು ಸುಮ್ನೆ ಹೊಡೆಯುವ ಶಾಸ್ತ್ರ ಮಾಡಿದೆ. ಮಾಸ್ತರ್ ಸಿಟ್ಟು ನೆತ್ಯಿಗೇರಿತು. ' ಅಲ್ಲಲೇ ಕಪಾಳ ಹೊಡಿಲೇ ಅಂದರ ದೋಸ್ತ್ರ ಗಲ್ಲ ಸವರರ್ತಿ,,,,ಇಲ್ಲಿ ಬಾ ಹ್ಯಾಂಗ್ ಹೊಡಿಬೇಕು ಅಂತಾ ನಾ ತೋರರ್ಸತೀನಿ' ಅಂದ ಕಪಾಳಕ್ಕೆ ಒಂದು ಬಿಟ್ಟರು. ಒಂದು ಕ್ಷಣ ತಲೆ ಗಿರಗುಟ್ಟಿದ ಹಾಗಾಗಿತ್ತು. ಆಮ್ಯಾಲ, ತೋಗೋರಿ, ನಾನು ಕೈ ಸಡಿಲ ಬಿಟ್ಟು ಕಪಾಳಕ್ಕ ಬಾರ ಮೂಡು ಹಂಗ ಹೊಡದಿದ್ದೆ. ಒಬ್ಬಾಂವನ ಮೂಗಿನಾಗಿನ ಶ್ರೀಮಂತಿಕೆ ಎಲ್ಲಾ ಹೊರಗ ಬಂದಿತ್ತು. ನಾಗರಾಜ ರಾವ್ ಅನ್ನೊ ಮಾಸ್ತರ್ ಇದ್ರು. ಅವರ ಪತ್ನಿ ಯೂ ಟೀಚರ್. ದೂರದ ಮೈಸೂರಿಮವರು. ಅವರು ನಮಗೆ ದೈಹಿಕ ಶಿಕ್ಷಣ ಹೇಳಿ ಕೊಡ್ತಿದ್ರು. ಲೇಜಿಂನ್ನು ಲಯಬದ್ಧ ವಾಗಿ ನುಡಿಸುತ್ತಾ,  ಹಾಡುತ್ತಾ ಕುಣಿಯುತ್ತಾ ಬಹಳ ಆನಂದದಿಂದ ಕಲಿಯುತ್ತಿದ್ದೆವು. ಮೇಲಾಧಿಕಾರಿಗಳ ವೀಕ್ಷಣೆ ದಿನದಂದು ಶ್ಯಾಣಾ ಹುಡುಗರನ್ನ ಇಡೀ ತರಗತಿಯಲ್ಲಿ ಒಂದೊಂದು ಸಾಲಿಗೆ ಒಬ್ಬರಂತೆ ಕುಳ್ಳಿರಿಸಿ, ಪ್ರಶ್ನೆ ಕೇಳಿದಾಗ ಆ ವಿದ್ಯಾರ್ಥಿಯೇ ಉತ್ತರ  ನೀಡುವಂತೆ ನೋಡಿಕೊಂಡು ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಿದ್ದರು. ಪ್ರತಿ ದಿನವೂ ಪ್ರಾರ್ಥನೆ ನಂತರ ,ಪಂಚಾಂಗ ಪಠಣ, ನುಡಿಮತ್ತು ಹೇಳುವುದು ಇರುತ್ತಿತ್ತು. ಒಮ್ಮೆ, ಅಧಿಕಾರಿಗಳು ಪ್ರಾರ್ಥನೆ ಸಮಯದಲ್ಲಿ ಉಪಸ್ಥಿತಿಯಲ್ಲಿ ನನ್ನ ತಮ್ಮ ಪ್ರಹ್ಲಾದ್ (ಭೀಮ್ಭಟ್ರ ಪಲ್ಯ ಅವನ ಜನಪ್ರಿಯ ನಾಮಧೇಯ) 'ಅಧಿಕಾರ ಬಂದಾಗ ಅರಿತು ನಡೆ' ಎಂಬ ನಾಣ್ಣಿಡಯನ್ನ ಹೇಳಿಬಿಟ್ಟ. ಹೆಡ್ ಮಾಸ್ತರ್ ಸಂಕೋಚ ಭಾವದಿಂದ ಅಧಿಕಾರಿಯತ್ತ ಚಿತ್ತ ಹರಿಸಿದ್ದರು. ಆ ಅಧಿಕಾರಿ, ಸಿಟ್ಟಾಗದೆ, 'ಹುಡುಗರನ್ನ ಹೀಗೆಯೇ ಸಿದ್ದಪಡಿಸ ಬೇಕು' ಅವರು ಹೆದರ ಬಾರದು ಎಂದು ಹೇಳಿ ಮಾಸ್ತರ್ ರ ಅಂಜಿಕಿನ ದೂರ ಮಾಡಿದ್ರು ಅಂತಾ ಆಮೇಲೆ ಗೊತ್ತಾತು. ಒಮ್ಮೆ ವೀರಭದ್ರಪ್ಪ ಸರ್ ಅವರು ನಮ್ಮಿಂದ ನಾಟಕಾ ಮಾಡ್ಸಿದ್ರು. ಅಲ್ಲಿ ಭಿಕ್ಷೆ ಬೇಡುವ ದೃಶ್ಯ ಬರ್ತದೆ. ಹಿಮ್ಮೆಳದಲ್ಲಿ ಕಾಸು ನೀಡುವಂತೆ ಆಗ್ರಹಿಸಿ ಹಾಡು ಹಾಡ್ತಾಇದ್ರು. ಕರಗಿದ ಪ್ರೇಕ್ಷಕರು ನಾಣ್ಯಗಳನ್ನು ಎಸೆಯಲು ಶುರು ಮಾಡಿದ್ರು. ನಾನು ನನ್ನ ಪತ್ನಿಯ ಪಾತ್ರಧಾರಿ ದೋಸ್ತ,,,,ನಾಣ್ಯಗಳನ್ನು ಹೆಕ್ಕಿ ಕೊಳ್ಳಲು ನಾ ಮುಂದೂ ತಾ ಮುಂದೂ ಎಂದು ಪೈಪೋಟಿಗೆ ಬಿದ್ದೆವು. ಸರ್ ಸಂಜ್ಞೆಗೂ ಬಗ್ಗಿರಲಿಲ್ಲ. ನಾಟಕ ಮುಗಿದು 'ಆಹೇರು' ಶುರು ಆಯ್ತು. ನನ್ನ ತಾತ ಐದು ರೂಪಾಯಿ ನೀಡಿದ್ರು. ಹೆಕ್ಕಿದ ನಾಣ್ಯಗಳಲ್ಲಿ ಇಬ್ರೂ ಸಮಪಾಲು ತೋಗೋರಿ ಅಂತ ಸರ್ ಪರ್ಮಾನು ಹೊರಡಿಸಿದ್ರು. ಬಾಲ್ಯದ ಇನ್ನೊಂದೆರಡು ಸಂಗತಿ ನಾನು  ಹೇಳ್ಳೆ ಬೇಕು. ದೇಶಪಾಂಡೆ ಓಣಿಯ ಬಳಿ ಮಸೀದಿ ಇದೆ. ಸಂಜೆಯ ಸಮಯದಲ್ಲಿ 'ಸ್ಟಾಪ್' ಆಟದಲ್ಲಿ  ಕೆಲವರು ಅಡಗಿಕೊಳ್ಳಲು ಮಸೀದಿಯೊಳಗಿನ ಕಟ್ಟಿಗೆಯ ಶವವಾಹ ಪೆಟ್ಟಿಗೆಯನ್ನು ಬಳಸುತ್ತಿದ್ದರು. ಅವರಲ್ಲಿ ನನ್ನ ಇನ್ನೊಬ್ಬ ತಮ್ಮ ಪ್ರಾಣೇಶ(ಪಾಣಾ) ನೆನಸಿಕೊಂಡರೆ ಈಗ ಭಯವಾಗುತ್ತದೆ. ಮುದಗಲ್ನಲ್ಲಿ ಬೇಸಿಗೆಯ ರಜಾ ದಿನಗಳಲ್ಲಿ, ಬಾವಿಯಲ್ಲಿ  ಈಸಾಡುವ ಆನಂದ  ಅದ್ಭುತ. ದಿನವೂ ಮೂರು ತಾಸು ಈಜಾಟ. ಕಲಿಯುವವರಿಗೆ ನಾನೂ ಒಬ್ಬ ತರಬೇತುದಾರ. ಹುಡುಗರ ಬೆನ್ನಿಗೆ, ಕಟ್ಟಿಗೆಯ ಪೆಂಡಿ, ಡಬ್ಬ, ದೊಡ್ಡ ಒಣಗಿದ ಕುಂಬಳ ಕಾಯಿ ಕಟ್ಟಿ ಬಾವಿಗೆ ದೂಡುತ್ತಿದ್ದೆವು. ಅವರಿಗೆ ನೀರು ಕುಡಿಯದಿರಲು ಹಾಗೂ ಕೈ ಕಾಲುಗಳನ್ನು ಯಾವ ಲಯದಲ್ಲಿ ಆಡಿಸಬೇಕು ಎಂದು ಹೇಳಿ ಧೈರ್ಯ ತುಂಬುತ್ತಿದ್ದೆ. ನಾನು ಮುಳುಗು ತಜ್ಞನಾಗಿ ಬಾವಿಯಲ್ಲಿ   ಬಿದ್ದಿರುವ ತಂಬಿಗೆ, ಕೊಡ ಇತ್ಯಾದಿ ಗಳನ್ನು  ಎತ್ತಿ ಕೊಡುತ್ತಿದ್ದೆ. ಇನ್ನೂ, ದೀಪಾವಳಿಯ ಎಲ್ಲರ ಮನೆಯಲ್ಲಿನ ಆರತಿ, ಗೌರಿ ಪೂಜೆಯನಂತರದ ಸಿಹಿ ಪ್ರಸಾದ, ಅಃತಕರಣವೇ ಮೂರ್ತಿವೆತ್ತ  ಪಿಕಳಿಹಾಳ್ ಪದ್ದಕ್ಕ, ಗುಡಿ ಅಚ್ಚಕ್ಕ, ರಾಮ ಭಟ್ರ ರಂಗಕ್ಕ, ವೈನಿ, ಅಚ್ಚಂವತ್ತಿ ಹೀಗೆ ಹಲವಾರು ಹಿರಿಯ ಜೀವಗಳನ್ನು ಮರೆತೆನೆಂದರೂ ಮರೆಲಾರೆ.

ಶಿಳ್ಳಿ

ಶಿಳ್ಳಿ:

ನೀವ್ ಕಬೂಲ್ ಆಗ್ರಿ ಬಿಡ್ರಿ ನಾ ಬಿಡಾಂವ ಅಲ್ಲ. ಒಂದ ಸಿನಿಮಾನ, ನಾಟಕಾನ, ಹಾಡಾ, ನೃತ್ಯನಾ ಯಾವದಾ ಇರಲಿ ಅದರಾಗ ನವರಂಗ ತುಂಬೂದು ಪ್ರೇಕ್ಷಕರ ಹೃದಯಾಂತರಾಳದ ಪ್ರೋತ್ಸಾಹ ಹೊರಗ ಬರೂದ ಸೀಟಿ ಮೂಲಕ. ನೀವು ಅನೌನ್ಸ್ ಮಾಡಿ ಚಪ್ಪಾಳಿ ಗಿಟ್ಸಿಸ್ಕೋಬಹ್ದು,,,,ಆದರಾ ಸಿಳ್ಳಿನ ಖಂಡಿನ ಅಲ್ಲ. ನನಗ ಇಷ್ಟರಾಗ ೫೮ ತುಂಬ್ತಾವ. ಇಷ್ಟ ವಯಸ್ಸಾದ್ರು ಸೀಟಿ ಶಬ್ದದ ಉಂಟು ಮಾಡುವ ಕಂಪನದ ಆನಂದ ಅನುಭವಿಸ್ಲಿಕ್ಕೇನೆ ಸಿನಿಮಾಕ್ಕ, ನಾಟಕಕ್ಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕ ಹೋಗ್ತಿರ್ತೀನಿ.ನನಗ ಸೀಟಿ ಹೋಡಿಯೋದಕ್ಕ ಬರಾಣಿಲ್ಲ. ಆ ಒಂದ ಸೀಟಿ ಸಲುವಾಗಿ ಚಡಪಡಸ್ತೀನಿ. ಒಂದು, ಅದರ ಹಿಂದ ಇನ್ನೊಂದು, ಮಗದೊಂದು ಸೀಟಿಗಳು ಬಂದು ಜೊತಿಗಿ ಚಪ್ಪಾಳಿ ಬಿದ್ರನಾ ಮೈ ನವಿರೇಳ್ತದ. ನಮ್ಮ ವಯಸ್ಸನ ಕಡಿಮೆ ಮಾಡೂ ಶಕ್ತಿ ಈ ಸೀಟಿಗಿ ಅದಾ. ಸಣ್ಣಾಂವ ಇದ್ದಾಗ, ರಾಜ್ಕುಮಾರ್ ಸಿನಿಮಾಕ್ಕ ಅದು ಹ್ಯಂಗೋ ರೊಕ್ಕ ಹೊಂದ್ಸಿಗೊಂಡು first day first showಕ್ಕನಾ ಹಾಜರ. ಅಣ್ಣಾವ್ರು ಆ ಸಿನಿಮಾದಲ್ಲಿ ಮೊದ್ಲನೆ ಸರ್ತಿ ತೆರೆ ಮ್ಯಾಲ ಬರುವಾಗ  ಸೀಟಿ ಸಂಭ್ರಮ ತಾರಕದಲ್ಲಿರುತಿತ್ತು. ನಾ ಸೀಟಿ ಹೊಡೆಂವ ಅಲ್ಲದ ಕಾರಣ, ಒಂದು ಪುಗ್ಗಾ ಕ(Balloon)ಗಾಳಿ ಊದಿ ಫಟ್ ಅಂತ ಒಡಿತಿದ್ದೆ.  ನನ್ತರ, ಪುಗ್ಗಾ ವೀರರು ಭಾಳ ಇರ್ತಿದ್ರು. ಈ ಬಲೂನ ಒಡೆಯುವಾಗಿನ ಶಬ್ದ ಜೊತಿಗಿ ಸೀಟಿಗಳು ತರೋ ಆನಂದ ಈಗ ಎಷ್ಟ ರೊಕ್ಕ ಕೊಟ್ರು ಸಿಗೂದಿಲ್ಲ ಬಿಡ್ರಿ.

೧೯೭೭

1977

ಅವು ೧೯೭೭ರ ಕಾಲಘಟ್ಟದ ದಿನಗಳು. ೧೦ನೆ ಇಯತ್ತೆಯಲ್ಲಿ  ೨ನೆ ದರ್ಜೆಯಲ್ಲಿ ನಾನು ಉತ್ತೀರ್ಣನಾಗಿ ಅಪ್ಪ ಅಮ್ಮ ಸಂತಸದ ಕಡಲಲ್ಲಿ ತೇಲಿದ್ದರು. ಜೊತೆಗೆ ಗಣಿತದಲ್ಲಿ ೧೦೦ಕ್ಕೆ ೭೫ ಅಂಕ ಗಳಿಸಿ 'ಶ್ಯಾಣ್ಯಾ' ಎಂಬ ಗರಿ ಬೇರೆ ನನ್ತಲೆಗೇರಿತ್ತು.ಅಪ್ಪ  ಅವರು ಶಾಲಾ ಮಾಸ್ತರ. ದುಡಿಯುವ ಕೈ ಎರಡು. ೫ ಮಕ್ಕಳ ತುಂಬು ಸಂಸಾರ. ಬರುವ ಪಗಾರದಲ್ಲಿ ನಮ್ಮೆಲ್ಲರ ತುತ್ತಿನ ಚೀಲ ತುಂಬಿಸುತ್ತಿದ್ದ ಅಮ್ಮನ ಚಾಣಾಕ್ಷ ಮತಿಗೆ ಜೈ ಅನ್ನಲೇ ಬೇಕು. ಅಪ್ಪನ ಆರ್ಥಿಕ ಹೊಣೆಗಾರಿಕೆಗೆ ಹೆಗಲು ಕೊಡುವ ಉದ್ದೇಶದಿಂದ ನಾನು ನನ್ನ ಇಷ್ಟದ ಬ್ಯಾಂಕ್ ನೌಕರಿಯ ಆಸೆಗೆ ತಿಲಾಂಜಲಿ ಇಟ್ಟು ಬೇಗನೆ ನೌಕರಿ ಸಿಗುವ Diploma in Civil Engg ಆಯ್ಕೆ ಮಾಡಿ ಕೊಂಡಿದ್ದೆ. ಸರಕಾರಿ ಕೋಟಾದಡಿಯೇ ಸೀಟು ಸಹ ಸರಕಾರಿ ಪಾಲಿಟೆಕ್ನಿಕ್ ರಾಯಚೂರಿನಲ್ಲಿ ಸಿಕ್ಕಿತ್ತು. ಪ್ರಾತಃಸ್ಮರಣೀಯರಾದ ಪೇಜಾವರ ಶ್ರೀ ಗಳು ಸ್ಥಾಪಿಸಿದ ರಾಯಚೂರಿನ ಮಧ್ವಮಂಡಲದಲ್ಲಿ ನನ್ನ ವಾಸದ ಹಾಗೂ ಊಟದ ವ್ಯವಸ್ಥೆಯನ್ನು ಅಪ್ಪ ಮಾಡಿದ್ದರು. ಮೊದಲ ಸಲ ಅಪ್ಪ ಅಮ್ಮರಿಂದ ಅಗಲಿ ಮಸ್ಕಿಯಿಂದ ರಾಯಚೂರು ಗೆ ನಾನು ಹೋಗುವ ದಿನದಂದು ಅಮ್ಮನ ಬಟ್ಟುಲು ಕಣ್ಣುಗಳಿಂದ ಅಶ್ರುಧಾರೆಗೆ ಬಿಡುವೇ ಇರಲಿಲ್ಲ. ಅಪ್ಪನ ಅಕ್ಷಿಗಳಲ್ಲೂ ಕಣ್ಣಿರ ಧಾರೆ. ಇನ್ನೂ, ನಾನಂತೂ, ರಾಯಚೂರುಗೆ ಹೊರಡುವ ದಿನದಂದು ಅತ್ತು ಅತ್ತು ಬಸವಳಿದಿದ್ದೆ. ಭಾರವಾದ ಹೃದಯದಿಂದ ಮಸ್ಕಿ ಯಿಂದ ರಾಯಚೂರಿಗೆ ಬಂದಿದ್ದೆ.  ಮೊದಲನೆ ದಿನ ಏನೋ ಕಾತರ. ಹೊಸ ಪರಿಸರ, ಹೊಸ ಸ್ನೇಹಿತರು ಮನ ಪುಳಕಗೊಂಡಿತ್ತು. ಕ್ಲಾಸ್ ಮುಗಿಸಿಕೊಂಡು ಮಧ್ಯಾನ್ಹ ಊಟಕ್ಕೆ ಬಂದಾಗ ಸಮಸ್ಯೆ ಶುರು ಆಯಿತು. ಅಮ್ಮನ ಕೈಯ ರುಚಿಕರ ಮುದ್ದಿಪಲ್ಯ, ಭಕ್ರಿ, ಕಡುಬು, ಗಿಲಗಂಚಿ, ಬೆಸನ್ ಉಂಡಿ ಮಂಡಾಳ ಓಗ್ಗರಣಿ, ಥಾಲಿಪಟ್ಟು ಇತ್ಯಾದಿಗಳನ್ನು ತಿಂದಿದ್ದ ನನ್ನ ಮನ ಮಧ್ವ ಮಂಡಳದ ಊಟವನ್ನು ಒಪ್ಪಲೇ ಇಲ್ಲ. ಅಳು ತಡೆಯಲಾಗಲಿಲ್ಲ, ಅಳುತ್ತಲೇ ಇದ್ದ ನನ್ನನ್ನು ಮೇನೆಜರ ದಿವಾನಜಿ ಅವರು ಬೆನ್ನ ಮೇಲೆ ಕೈಯಾಡಿಸಿ ಸಂತೈಸಿದರೂ ಊಟ ಸೇರಿರಲಿಲ್ಲ. ರಾಯಚೂರಿನಲ್ಲಿಯೇ ಇದ್ದ ನನ್ನ ಸೋದರತ್ತೆ(ಅಪ್ಪನ ಅಕ್ಕ)ಕಮಲವ್ವನ ಮನೆಗೆ ಹೋಗಿ ಹೊಟ್ಟೆ ತುಂಬಾ ತಿಂದಿದ್ದೆ. ಅಪ್ಪ ಅಮ್ಮಾ ನನ್ನ ಕಷ್ಟ ನೋಡಲಾರದೆ, ಕೊನೆಗೆ ರಾಯಚೂರಿನಲ್ಲಿಯೇ ಮನೆ ಮಾಡಿದರು. ಇದರಿಂದಾಗಿ ಅಮ್ಮ ರುಚಿಕರ ಊಟ ಪುನಃ ನನಗೆ ಲಭಿಸುವಂತಾಗಿತ್ತು. ಅವರ ಪ್ರೀತಿಗೆ ಸಾಟಿಯೇ ಇಲ್ಲ. ನಾವು ೫ ಜನ ಅವರ ಆರ್ಶಿವಾದದಿಂದ ಸರಕಾರಿ ನೌಕರಿ(ಕೊನೆ ತಮ್ಮ ವಿದೇಶದಲ್ಲಿದ್ದಾನೆ) ಪಡೆದುಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ನಮ್ಮ ಏಳ್ಗೆಯನ್ನು ನೋಡಿ ಸಂತಸ ಪಡುವ ಭಾಗ್ಯ ಅಪ್ಪ ಅಮ್ಮನಿಗಿರಲಿಲ್ಲ. ೧೯೯೧ರಲ್ಲಿ ಅಪ್ಪ ,೧೯೯೫ರಲ್ಲಿ ಅಮ್ಮಾ ಶ್ರೀ ಹರಿಯ ಪಾದ ಸೇರಿಕೊಂಡು ಅಲ್ಲಿಂದಲೇ ನಮ್ಮನ್ನು ಹರಸುತ್ತಿದ್ದಾರೆ. ಮೊಂಬತ್ತಿಯ ಹಾಗೆ ನಮ್ಮ ಬದುಕನ್ನು ಬೆಳಕು ಮಾಡಿದ ಅಪ್ಪ ಅಮ್ಮ ಏಳು ಜನ್ಮಕ್ಕೂ ಇವರೇ ನನ್ನ ಜನ್ಮದಾತರಾಗಲಿ ಎನ್ನುವುದೇ  ನಮ್ಮ ಆಶಯ.